ಶಿವಮೊಗ್ಗ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯುವ ಸಮುದಾಯದಲ್ಲಿ ಅರಿವು ಮೂಡಿ, ವ್ಯಸನದ ವಿರುದ್ಧ ದೃಢ ನಿಲುವು ರೂಪುಗೊಂಡಾಗ ಮಾತ್ರ ನಶೆಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಸಂತೋಷ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ಭಾರತ’ ಮತ್ತು ಅಂಗದಾನ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನಾನು ಒಬ್ಬಂಟಿಯಾಗಿದ್ದಾಗ ಹೇಗೆ ವರ್ತಿಸುತ್ತೇನೆ ಎಂಬುದೇ ನನ್ನ ವ್ಯಕ್ತಿತ್ವದ ನಿಜವಾದ ಮಾನದಂಡ. ವ್ಯಕ್ತಿಯ ಜೀವನವು ಅವನ ಚರಿತ್ರೆ ಹಾಗೂ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಹಿಂದಿನ ಕಾಲದಲ್ಲಿ ಇಡೀ ಸಮಾಜವೇ ಮಕ್ಕಳ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿತ್ತು. ಆದರೆ ಇಂದು ಸಮಾಜದ ರಚನೆ ಮತ್ತು ಮಕ್ಕಳ ಮನಸ್ಥಿತಿ ಎರಡೂ ಬದಲಾಗಿದ್ದು, ಹಿರಿಯರನ್ನು ಗೌರವಿಸುವ ಸಂಸ್ಕಾರ ಹಾಗೂ ಒಳ್ಳೆಯ ಸಲಹೆಗಳನ್ನು ಸ್ವೀಕರಿಸುವ ಮನೋಭಾವ ಕಡಿಮೆಯಾಗುತ್ತಿದೆ” ಎಂದು ಹೇಳಿದರು.
ಮಾದಕ ವಸ್ತುಗಳು ವ್ಯಕ್ತಿಯಲ್ಲಿ ಕ್ರೌರ್ಯ ಹಾಗೂ ಅಮಾನವೀಯ ಪ್ರವೃತ್ತಿಗಳನ್ನು ಹೆಚ್ಚಿಸುತ್ತವೆ. ನಶೆಯ ಅಮಲಿನಲ್ಲಿ ನಡೆಯುವ ಅಪರಾಧಗಳಿಗೆ ಕಾನೂನು ಯಾವುದೇ ಕನಿಕರ ತೋರಿಸುವುದಿಲ್ಲ. ಅಂತಹವರನ್ನು ಮೊದಲು ಅಪರಾಧಿಗಳಾಗಿ ಪರಿಗಣಿಸಿ, ನಂತರ ಅಗತ್ಯವಿದ್ದಲ್ಲಿ ರೋಗಿಗಳಾಗಿ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಶಿಸ್ತುಬದ್ಧ ಜೀವನ, ಸಾಮಾಜಿಕ ನಡವಳಿಕೆ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತದೆ. ಕುತೂಹಲದಿಂದ ಆರಂಭವಾಗುವ ಮಾದಕ ವಸ್ತುಗಳ ಬಳಕೆ ಕ್ರಮೇಣ ವ್ಯಸನವಾಗಿ ರೂಪುಗೊಂಡು, ವ್ಯಕ್ತಿಯನ್ನು ಸಂಪೂರ್ಣವಾಗಿ ಅದರ ಅವಲಂಬಿತನನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ವಿಶೇಷವಾಗಿ ಫಾರ್ಮಸಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಸಮಾಜದ ವಿವಿಧ ವಲಯಗಳಲ್ಲಿಯೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ನಶೆಮುಕ್ತ ವಾತಾವರಣ ನಿರ್ಮಾಣಕ್ಕೆ ಯುವಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್, ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಮಂಜುನಾಥ, ಎನ್ಯು ಆಸ್ಪತ್ರೆಯ ನೆಫ್ರಾಲಜಿಸ್ಟ್ ಡಾ. ಪ್ರವೀಣ್ ಮಳವಾಡೆ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಹರ್ಷ ಎಸ್.ಎನ್. ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಲಿಖಿತ ಕಾರ್ಯಕ್ರಮ ನಿರೂಪಿಸಿದ್ದು, ವಿದ್ಯಾರ್ಥಿನಿ ದಿಶಾ ಪ್ರಾರ್ಥಿಸಿದರು.
ಇಂದಿನ ಯುವಜನತೆ ಸರಿಯಾದ ಮಾರ್ಗದರ್ಶನ ಮತ್ತು ವಿವೇಚನೆಯ ಕೊರತೆಯಿಂದ ದಾರಿ ತಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳತ್ತ ಹೆಚ್ಚು ಗಮನ ಹರಿಸಬೇಕು
:ಎಸ್.ಎನ್.ನಾಗರಾಜ
ಕಾರ್ಯದರ್ಶಿ, ರಾಷ್ಟ್ರೀಯ ಶಿಕ್ಷಣ ಸಮಿತಿ
