ಶಿಕಾರಿಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರಂತರವಾಗಿ ರೈತರ ವಿರುದ್ದ ಗದಾಪ್ರಹಾರದಲ್ಲಿ ನಿರತವಾಗಿದ್ದು, ವಿದ್ಯುತ್ ಖಾಸಗೀಕರಣ,ಸೀಮಿತ ಗೊಬ್ಬರ ವಿತರಣೆ,ಸಾಗುವಳಿದಾರರ ಒಕ್ಕಲೆಬ್ಬಿಸುವಿಕೆ ಮೂಲಕ ರೈತ ನೆಮ್ಮದಿಯಿಂದ ಬದುಕಲು ಸಾದ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾ.ರೈತ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅತಿವೃಷ್ಠಿ ಅನಾವೃಷ್ಟಿ ಜತೆಗೆ ರೈತರ ಉತ್ಪನ್ನಗಳ ಬೆಲೆ ಕುಸಿತದಿಂದ ಪ್ರತಿ ವರ್ಷ ರೈತರ ಬದುಕು ತೀವ್ರ ಸಂಕಷ್ಟದಲ್ಲಿದ್ದು ಇದರೊಂದಿಗೆ ಪದೇಪದೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ನೀತಿಯಿಂದ ರೈತರು ಕಂಗೆಟ್ಟಿದ್ದಾರೆ ಎಂದು ತಿಳಿಸಿದ ಅವರು ಇದೀಗ ವಿದ್ಯುತ್ ಖಾಸಗೀಕರಣದ ಸಂಚು ರೂಪಿಸಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆಯುವ ಸಿದ್ದತೆಯಲ್ಲಿದೆ.ಪ್ರತಿ ಬೋರ್ವೆಲ್ ಗೆ ಮೀಟರ್ ಅಳವಡಿಸುವ ಕುತಂತ್ರ ಸರ್ಕಾರದಿಂದ ನಡೆಯುತ್ತಿದೆ ಸರ್ಕಾರದ ನೀತಿಯನ್ನು ರೈತರು ಒಗ್ಗಟ್ಟಿನಿಂದ ಖಂಡಿಸಿ ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೂತನ ಎಫ್ ಐಡಿ ನೀತಿಯು ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ತಂತ್ರದ ಭಾಗವಾಗಿದೆ ಇದರಿಂದಾಗಿ ಎಕರೆಗೆ ಒಂದು ಗೊಬ್ಬರ ಚೀಲದಿಂದ ಹೆಚ್ಚಿರುವ ಸಾಗುವಳಿದಾರ ರೈತರು ಬಿತ್ತನೆ ಸಂದರ್ಭದಲ್ಲಿ ಆತ್ಮಹತ್ಯೆಯ ದಾರಿಯನ್ನ ಹಿಡಿಯಬೇಕಾಗುತ್ತದೆ ಎಂದು ದೂರಿದ ಅವರು ಈ ಕೂಡಲೇ ಎಫ್ ಐ ಡಿ ನೀತಿ ವಾಪಾಸ್ ಪಡೆದು ಎಲ್ಲ ರೈತರಿಗೂ ಅಗತ್ಯ ಗೊಬ್ಬರ ವಿತರಿಸುವ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಮತ್ತು ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ವಿಪರೀತವಾಗಿದ್ದು,ಸಾಗುವಳಿಗೆ ಅವಕಾಶ ನೀಡದೆ ಸತಾಯಿಸುತ್ತಿದ್ದಾರೆ ಎಂದ ಅವರು ಡೀಮ್ಡ್ ಫಾರೆಸ್ಟ್ ನೀತಿಯನ್ನು ಕೈಬಿಟ್ಟು ಕೂಡಲೇ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ವಿತರಿಸುವಂತೆ ಒತ್ತಾಯಿಸಿದರು.ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚಾಗಿದ್ದು ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದಾರೆ.ಸಂತ್ರಸ್ಥರಿಗೆ ಇದುವರೆಗೂ ಹಕ್ಕು ಪತ್ರ ವಿತರಿಸದೆ ಭೂಮಿಯನ್ನು ತೋರಿಸದೆ ರಾಜಕೀಯ ಕುತಂತ್ರಕ್ಕೆ ಬಲಿಯಾಗಿದ್ದು,ರಾಜಕಾರಣಿಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸ್ಥಳೀಯ ಕೃಷಿ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಸಬ್ಸಿಡಿ ದರದಲ್ಲಿ ವಿತರಿಸುವ ಕೃಷಿ ಪರಿಕರ ಸಮರ್ಪಕವಾಗಿ ಅರ್ಹ ರೈತರಿಗೆ ನೀಡದೆ ತಾರತಮ್ಯ ಎಸಗಲಾಗುತ್ತಿದೆ.ದೂರದ ರೈತರಿಗೆ ಸಬ್ಸಿಡಿ ಬಗ್ಗೆ ವಿಚಾರ ವಿಷಯ ತಲುಪುವ ಮುಂಚೆ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಖಾಲಿಯಾಗಿದೆ ಎಂಬ ನಾಮಫಲಕ ಅಳವಡಿಸಲಾಗುತ್ತಿದೆ ಎಂದು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಕೈಬಿಟ್ಟು ಕೂಡಲೇ ರೈತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ ಅವರು ತಪ್ಪಿದಲ್ಲಿ ರೈತರು ಸಂಘಟಿತರಾಗಿ ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವುದು ನಿಶ್ಟಿತ ಎಂದು ತಿಳಿಸಿದರು.
ಆರಂಭದಲ್ಲಿ ಶಿವಮೊಗ್ಗ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಿಕ್ಕಾರ ಹಾಕಲಾಯಿತು.ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಬದಲ್ಲಿ ರೈತ ಸಂಘದ ತಾ.ಅಧ್ಯಕ್ಷ ಪ್ರಮೋದ್ ಕುಮಾರ್,ರಾಜು,ಉಪಾಧ್ಯಕ್ಷ ಸಂತೋಷ್ ಈಸೂರು,ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಪುಟ್ಟಣ್ಣಗೌಡ,ಬೇಗೂರು ಶಿವಪ್ಪ,ಚಂದ್ರಶೇಖರಪ್ಪ,ಗುರುಮೂರ್ತ್ಯಪ್ಪ,ಶಿವಮೂರ್ತ್ಯಪ್ಪ, ಹನುಮಂತಪ್ಪ,ಸುಬಾಷಚಂದ್ರ ಮತ್ತಿತರರು ಹಾಜರಿದ್ದರು.
