ಶಿವಮೊಗ್ಗ : ಜಿಲ್ಲೆಯಲ್ಲಿ ಮನೆ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (ಎಲ್ಹೆಚ್ಬಿಎಸ್)’ ಎಂಬ ಹೊಸ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ತಿಳಿಸಿದ್ದಾರೆ.
ಮನೆಗಳನ್ನು ಬೀಗ ಹಾಕಿ ಹೊರಗಡೆ ಹೋಗುವವರು ತಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರಿಗೆ ಹಸ್ತಾಂತರಿಸಬಹುದಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದಕ್ಕಾಗಿ ನಾಗರಿಕರು ಮೂರು ಮುಖ್ಯ ಮಾಹಿತಿಗಳನ್ನು ನೀಡಬೇಕು, ಹೊರಡುವ ಮತ್ತು ಮರಳುವ ದಿನಾಂಕ, ಮನೆಯ ಸಂಪೂರ್ಣ ವಿಳಾಸ ಹಾಗೂ ತಮ್ಮ ಮನೆಯ ಮುಂದೆ ನಿಂತು ತೆಗೆದ ಸೆಲ್ಫಿಯನ್ನು ವಾಟ್ಸಾಪ್ ಮೂಲಕ 8277982901 ದೂರವಾಣಿ ಸಂಖ್ಯೆಗೆ ಕಳುಹಿಸಬೇಕು. ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿವರಗಳನ್ನು ಅಪ್ಲೋಡ್ ಮಾಡಬಹುದು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಿಯಮಿತವಾಗಿ ಮನೆಗಳ ಮೇಲೆ ಕಣ್ಗಾವಲು ಇಡಲಿದ್ದಾರೆ ಎಂದರು.
ಮನೆಯ ಮುಂದೆ ಪತ್ರಿಕೆಗಳ ರಾಶಿ ಅಥವಾ ಹಾಲಿನ ಪ್ಯಾಕೇಟ್ಗಳು ಬಿದ್ದಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸದ ವಿವರಗಳನ್ನು ಹಂಚಿಕೊಳ್ಳುವುದು ಮುಂತಾದ ಅಜಾಗರೂಕತೆಗಳು ಕಳ್ಳತನಕ್ಕೆ ಕಾರಣವಾಗಬಹುದು ಸಾರ್ವಜನಿಕರು ಈ ಕುರಿತು ಜಾಗ್ರತೆ ವಹಿಸಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು, 2026 ಜನವರಿ 1ರಿಂದ ಇದುವರೆಗೆ 280 ಪ್ರಕರಣಗಳು ದಾಖಲಾಗಿದ್ದು, 330 ಆರೋಪಿತರನ್ನು ಬಂಧಿಸಲಾಗಿದೆ. ಸುಮಾರು 30 ಕೆಜಿ ಗಾಂಜಾ ಹಾಗೂ 27.37 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.52 ಮಂದಿ ಆರೋಪಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಅವರು ದುಶ್ಚಟದಿಂದ ದೂರವಾಗಿದ್ದಾರೆ ಎಂದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ‘ಅಕ್ಕಪಡೆ’ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಉಪಟಳ ನೀಡಿದ 156 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡ್ರೋಣ್ ತಂತ್ರಜ್ಞಾನದ ಮೂಲಕ ಖಾಲಿ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೂ ಕಣ್ಣಿಟ್ಟಿದ್ದು, ಜೂಜಾಟ ಮತ್ತು ಸಾರ್ವಜನಿಕ ಮದ್ಯಪಾನ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಘನ ನ್ಯಾಯಾಲಯಗಳಲ್ಲಿ ಜನವರಿ 1ರಿಂದ ಇದುವರೆಗೆ 27 ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದರು.
——————————————————————————————————————-
ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ :
ಸಮಾಜದ ಹಿತದೃಷ್ಟಿಯಿಂದ ಸುಳ್ಳು ಸುದ್ದಿ ಹಬ್ಬಿಸುವುದು ಅಥವಾ ಪ್ರಚೋದನಾತ್ಮಕ ವೀಡಿಯೊಗಳನ್ನು ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ನಿಖಿಲ್ ಬಿ. ಎಚ್ಚರಿಸಿದರು. ಮಾಧ್ಯಮಗಳು ಸಹ ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.
——————————————————————————————————————–
ಡ್ರೋಣ್ ಕಣ್ಗಾವಲು: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ :
ಜಿಲ್ಲಾ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮೆರಾ ಮೂಲಕ ನಿರ್ಜನ ಪ್ರದೇಶಗಳಲ್ಲಿ ಕಣ್ಗಾವಲು ಇಡುತ್ತಿದ್ದು, ಭದ್ರಾವತಿ ಮತ್ತು ಗ್ರಾಮಾಂತರ ಭಾಗಗಳಲ್ಲಿ ಜೂಜಾಟ ಹಾಗೂ ಸಾರ್ವಜನಿಕ ಮದ್ಯಪಾನ ನಡೆಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. ಈ ತಂತ್ರಜ್ಞಾನದಿಂದ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತಿದೆ.
