ಶಿವಮೊಗ್ಗ:ಹಸಿರು ಜೀವನಕ್ಕೆ ಅತಿ ಅವಶ್ಯಕ. ಪರಿಸರ ಇದ್ದರೆ ಮನುಕುಲದ ಉಳಿವು. ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲು ಹಸಿರು ನೆರವಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಕನಿಷ್ಠ ಏಳು ಗಿಡಗಳನ್ನಾದರೂ ನೆಟ್ಟು ಬೆಳೆಸಿದರೆ, ಅದಕ್ಕಿಂತ ಉತ್ತಮ ಕಾರ್ಯ ಬೇರೊಂದಿಲ್ಲ ಎಂದು ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಮಧ್ಯಪ್ರದೇಶದ ಇಂದೋರ್ ನ ನಿವಾಸಿ, ಪರಿಸರ ಪ್ರೇಮಿ ಡಾ. ಶಂಕರ್ ಲಾಲ್ ಗಾರ್ಗ್ ಹೇಳಿದರು.
ಶಿವಮೊಗ್ಗದ ಪ್ರೆಸ್ ಕಾಲೋನಿಯ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ ಒಂದು ಲಕ್ಷ ರೂ.ಗೌರವ ಸ್ವೀಕರಿಸಿ ಮಾತನಾಡಿದರು
ಪರಿಸರ ಸಮತೋಲನ ಕಾಪಾಡಲು ಅರಣ್ಯ ಸಂಪತ್ತು ಅವಶ್ಯಕ. ಪರಿಸರ ಇದ್ದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ಮರಗಳು ಸಹಸ್ರಾರು ವರ್ಷಗಳ ಕಾಲ ನಮಗೆ ಆಮ್ಲಜನಕವನ್ನು ನೀಡಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ವಾಯು ಮಾಲಿನ್ಯವನ್ನು ತಡೆಗಟ್ಟುತ್ತದೆ ಎಂದು ತಿಳಿಸಿದರು.
ಸರ್ಕಾರಿ ಹುದ್ದೆಯಿಂದ ನಿವೃತ್ತಿಯಾದ ನಂತರ 22 ಎಕರೆ ಬಂಜರು ಭೂಮಿಯಲ್ಲಿ ಸುಮಾರು 50 ಸಾವಿರ ಮರಗಳನ್ನು ಬೆಳೆಸಲಾಗಿದೆ. ಪರಿಸರದೊಂದಿಗೆ ತಮ್ಮ ಜೀವನ ಸಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಮರಗಳನ್ನು ಬೆಳೆಸುವ ಯೋಜನೆ ತಮ್ಮದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಸಹಸ್ರಾರು ಮಹಿಳೆಯರಿಗೆ ಕಲಿಸುತ್ತಿರುವ ಆಶಾ ಆರ್. ಕುಮಾರ್ ಅವರಿಗೆ ಶ್ರೀ ಲಲಿತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಶಾ ಆರ್. ಕುಮಾರ್ ಮಾತನಾಡಿ, ಪಾಲಕರು ಮಕ್ಕಳಿಗೆ ವಿದ್ಯೆ ನೀಡುವ ಜೊತೆಗೆ ಸಂಸ್ಕಾರ ಕಳಿಸಬೇಕು. ಸಂಸ್ಕಾರವಿದ್ದರೆ ಮಾತ್ರ ಉತ್ತಮ ಬದುಕು ಸಾಗಿಸಲು ಸಾಧ್ಯ ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದರು.
ಲಲಿತಾ ಪುರಸ್ಕಾರ ಗೌರವ ನೀಡಿ ಸನ್ಮಾನಿಸಿರುವುದು ತಮಗೆ ಅತೀವ ಸಂತಸ ಉಂಟು ಮಾಡಿದೆ. ಮತ್ತಷ್ಟು ಸಾಧನೆಗೆ ಪ್ರೇರಕವಾಗಿದೆ ಎಂದು ತಿಳಿಸಿದರು.
ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷರಾದ ಮಾತಾ ಚೈತನ್ಯಮಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಶಸ್ತಿ ಪುರಸ್ಕೃತರ ಸಾಧನೆ ಸರ್ವರಿಗೂ ಮಾದರಿಯಾಗಿದೆ. ಭಗವತಿ ನಾಮಸ್ಮರಣೆ, ಉತ್ತಮ ಸಂಸ್ಕಾರಗಳಿಂದ ಜೀವನದಲ್ಲಿ ಸಾಧನೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಎಂ. ಎನ್. ಸುಂದರ್ ರಾಜ್ ಮಾತನಾಡಿ,
ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಕಳೆದ ಮೂರು ವರ್ಷಗಳಿಂದ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಶ್ರೀ ಲಲಿತಾ ಪುರಸ್ಕಾರ ಪ್ರಶಸ್ತಿ ನೀ ನೀಡುತ್ತಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ದೊಡ್ಡಮ್ಮದೇವಿ ಉಪಾಸಕರಾದ ಸಿದ್ದಪ್ಪಾಜಿ ಅವರು ಮಾತನಾಡಿ, ನಾವೆಲ್ಲರೂ ಭಗವತಿ ದಾಸರಾಗಬೇಕು. ಸನ್ಮಾರ್ಗದಲ್ಲಿ ಮುನ್ನಡೆಬೇಕು. ಆಗ ಮಾತ್ರ ಇಷ್ಟಾರ್ಥ ಸಿದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿಯೂ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಕ್ತಾಭಟ್ ನೇತೃತ್ವದಲ್ಲಿ ಸಾಮೂಹಿಕ ದುರ್ಗಾ ಕವಚ ಪಠಣ, ಗಾಯತ್ರಿ ವಿಶ್ವಕರ್ಮ ಭಜನಾ ಮಂಡಳಿಯ ಅನ್ನಪೂರ್ಣ ಕಾಳಚಾರ್ ನೇತೃತ್ವದಲ್ಲಿ ಭಜನೆ, ಕಾವ್ಯರಿಂದ ಗಾಯನ ಹಾಗೂ ಸನ್ಮತಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಟ್ರಸ್ಟ್ ನ ಕಾರ್ಯದರ್ಶಿ ರಾಧಾ ಎಂ. ಇತರರಿದ್ದರು. ನಿರೂಪಣೆಯನ್ನು ಪುರುಷೋತ್ತಮ್ ಹಾಗೂ ವಂದನಾರ್ಪಣೆಯನ್ನು ರಾಮಕೃಷ್ಣ ನಡೆಸಿಕೊಟ್ಟರು.
ಉತ್ಸವ ಮೂರ್ತಿಯ ಮೆರವಣಿಗೆ:
ಸಮಾರಂಭದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ದೊಡ್ಡಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಹಾಗೆಯೇ ದೊಡ್ಡಮ್ಮ ದೇವಾಲಯದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿತು. ಸುಮಾರು 10 ಕ್ಕೂ ಹೆಚ್ಚು ಮಕ್ಕಳಿಗೆ ನಾಮಕರಣ ನಡೆಸಲಾಯಿತು. ಇದೇ ವೇಳೆ ಮಹಾಶಕ್ತಿ ವಾರ್ಷಿಕ ವಿಶೇಷ 2 ನೇ ಸಂಚಿಕೆ ಬಿಡುಗಡೆ ಮಾಡಲಾಯಿತು.

ಶಿವಮೊಗ್ಗದ ಪ್ರೆಸ್ ಕಾಲೋನಿಯ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ ಒಂದು ಲಕ್ಷ ರೂ.ಗೌರವ ಸ್ವೀಕರಿಸಿ ಮಾತನಾಡಿದರು