ಮೈಸೂರು: ಇದೇ ತಿಂಗಳು ೨೪ ರಂದು ಅಂದ್ರೆ ನಾಡಿದ್ದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಮತ್ತು ಹೆತ್ತವರು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಯುವತಿಯನ್ನು ರಕ್ಷಿತಾ(೨೧) ಹಾಗೂ ಆಕೆಯ ತಂದೆ ಶಿವಣ್ಣ(೫೪), ತಾಯಿ ನಾಗರತ್ನ(೪೪) ಎಂದು ಗುರುತಿಸಲಾಗಿದೆ. ಈ ಮೂವರ ಸಾವಿಗೂ ಉಲ್ಲಾಸ್ ಗೌಡ ಕಾರಣನೆಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ.
ತಮ್ಮ ಗ್ರಾಮದ ಉಲ್ಲಾಸ್ ಗೌಡ ಯುವತಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮೂವರು ವಿಷ ಸೇವಿಸಿ ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ ೨೪, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ಮೂರು ತಿಂಗಳ ಹಿಂದೆ ಮೃತ ರಕ್ಷಿತಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಅವರ ನಿಶ್ಚಿತಾರ್ಥದ ಸಮಯದಲ್ಲಿಯೂ ಉಲ್ಲಾಸ್ ಗೌಡ ಓಡಾಡಿಕೊಂಡಿದ್ದ. ಇದೇ ತಿಂಗಳ ೨೩-೨೪ರಂದು ಮದುವೆ ನಿಗದಿಯಾಗಿತ್ತು. ಆದರೆ ಒಂದು ವಾರದ ಹಿಂದಷ್ಟೇ ಉಲ್ಲಾಸ್ ರಕ್ಷಿತಾಳನ್ನು ಲವ್ ಮಾಡುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಆಕೆಯ ಪೋಷಕರ ಬಳಿ ಕೇಳಿದ್ದ. ಆಗ ಬೈದು ಬುದ್ದಿಮಾತು ಹೇಳಿದ್ದರು. ಅಷ್ಟಕ್ಕೂ ಕೇಳದೇ ಗಲಾಟೆ ಮಾಡಿದ್ದ. ರಾತ್ರಿ ಗ್ರಾಮದಲ್ಲಿ ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯತಿ ಮಾಡಿದ್ದರು.
ಅದಾದ ಬಳಿಕ ಈ ಹಿಂದೆ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಮೆಸೇಜ್ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದ. ಅಷ್ಟಕ್ಕೇ ನಿಲ್ಲಿಸದೇ ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಮೆಸೇಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ದ. ಇದರಿಂದ ಅವಮಾನಕ್ಕೊಳಗಾದ ಕುಟುಂಬಸ್ಥರು ಡೆತ್ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ವರುಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Subscribe to Updates
Get the latest creative news from FooBar about art, design and business.
ಘೋರ ದುರಂತ: ಹಸೆಮಣೆ ಏರಬೇಕಿದ್ದ ಯುವತಿ, ತಂದೆ-ತಾಯಿ ಆತ್ಮಹತ್ಯೆ
Tragic tragedy: Young woman, parents commit suicide as she was about to climb the mountain
