ಶಿವಮೊಗ್ಗ: ನಗರದ ಗಾಂಧಿಬಜಾರ್ನಲ್ಲಿ ಶುಕ್ರವಾರ ಸಂಜೆ ನಡೆದ ರೌಡಿಶೀಟರ್ ನರಸಿಂಹ ಹತ್ಯೆ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿರುವ ಕೆಲವು ಸ್ಟೇಟಸ್ಗಳು ಹೊಸ ಚರ್ಚೆಗೆ ಕಾರಣವಾಗಿವೆ. ನರಸಿಂಹನ ಆಪ್ತರು ಹಾಗೂ ಸಹಚರರೆಂದು ಹೇಳಲಾಗುತ್ತಿರುವ ಕೆಲವರು ಹಂಚಿಕೊಂಡಿರುವ ಪೋಸ್ಟ್ಗಳು ಪೊಲೀಸರ ಗಮನ ಸೆಳೆದಿವೆ.
ಮಾಹಿತಿಯ ಪ್ರಕಾರ, ನರಸಿಂಹನ ಆತ್ಮೀಯ ಸ್ನೇಹಿತ ಹಾಗೂ ರೌಡಿಶೀಟರ್ ಆಗಿರುವ ಕಾಡಾ ಕಾರ್ತಿಕ್ ಮತ್ತು ಮತ್ತೊಂದು ಕೊಲೆ ಪ್ರಕರಣದಲ್ಲಿ ಎ–2 ಆರೋಪಿಯಾಗಿರುವ ಬಜರಂಗಿ ನಿತಿನ್ ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಪ್ರತೀಕಾರದ ಸುಳಿವು ನೀಡುವ ರೀತಿಯ ಸ್ಟೇಟಸ್ಗಳನ್ನು ಪ್ರಕಟಿಸಿದ್ದಾರೆ ಎನ್ನಲಾಗಿದೆ.
ಸ್ಟೇಟಸ್ಗಳಲ್ಲಿ ನರಸಿಂಹ ಹತ್ಯೆಗೆ ಪ್ರತಿಕ್ರಿಯೆ ಹಾಗೂ ಪ್ರತೀಕಾರ ತೀರಿಸಿಕೊಳ್ಳುವ ಉಲ್ಲೇಖಗಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲೂ ಆತಂಕಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಮತ್ತು ಸಂದೇಶಗಳ ಮೇಲೂ ನಿಗಾ ವಹಿಸಿದ್ದು, ಯಾವುದೇ ಪ್ರಚೋದನಾತ್ಮಕ ಅಥವಾ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ನರಸಿಂಹ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?
Narasimha murder echoes: A call for revenge on social media?
